ಕಲಾರಾಧನೆಗೆ ಪೂರಕ ಪ್ರೇರಣೆ : ಶ್ರೀ ಶಾರದಾ ಯಕ್ಷಕಲಾ ಕೇಂದ್ರ
ಲೇಖಕರು : ಇಂದಿರಾ ಕೂಳೂರು
ಶುಕ್ರವಾರ, ನವ೦ಬರ್ 29 , 2013
|
ಡಿಸೆ೦ಬರ್ 4, 2013
|
ಕಲಾರಾಧನೆಗೆ ಪೂರಕ ಪ್ರೇರಣೆ : ಶ್ರೀ ಶಾರದಾ ಯಕ್ಷಕಲಾ ಕೇಂದ್ರ
ಮ೦ಗಳೂರು :
ಉತ್ಸಾಹಿ ಯಕ್ಷಗಾನ ಪ್ರೇಮಿಗಳು, ಚುರುಕಿನ ಪುಟಾಣಿ ವಿದ್ಯಾರ್ಥಿಗಳು, ಪುಟಾಣಿಗಳ ಕಲಾಸಕ್ತಿಗೆ ಜ್ಞಾನದೀಪವಾಗಿರುವ ಗುರುಗಳು, ಎಲ್ಲಕ್ಕಿಂತ ಮಿಗಿಲಾಗಿ ಕಲಾರಾಧನೆಯನ್ನು ಹುಮ್ಮಸ್ಸು, ಹುರುಪಿನಿಂದ ನಡೆಸುತ್ತಿರುವ ಶಾರದಾ ಯಕ್ಷಕಲಾ ಕೇಂದ್ರ ಸಮಿತಿ ಪದಾಧಿಕಾರಿಗಳು... ಮಂಗಳೂರು ಉರ್ವಾಸ್ಟೋರಿನ ಶ್ರೀ ಶಾರದಾ ಯಕ್ಷಕಲಾ ಕೇಂದ್ರ ನವಮ ವರ್ಷಾಚರಣೆಯ ಮೆಟ್ಟಿಲನ್ನೇರಲು ಈ ಎಲ್ಲರ ಪರಿಶ್ರಮದ ಒಂದೊಂದು ಹೆಜ್ಜೆಯೂ ಕಾರಣವಾಗಿದೆ.
2005ರ ನ. 2ರಂದು ಪ್ರಾರಂಭವಾದ ಶ್ರೀ ಶಾರದಾ ಯಕ್ಷ ಕಲಾ ಕೇಂದ್ರ ಒಂಬತ್ತನೇ ವರ್ಷ ಆಚರಣೆಯ ಸಂಭ್ರಮದಲ್ಲಿ ಪುಟಾಣಿ ಕಲಾವಿದ ರಿಂದ "ಶ್ರೀದೇವಿ ಮಹಾತ್ಮೆ' ಎಂಬ ಯಕ್ಷಗಾನ ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶಿಸಿತು.
|
"ಶ್ರೀದೇವಿ ಮಹಾತ್ಮೆ'' ಎಂಬ ಯಕ್ಷಗಾನ ಪ್ರಸಂಗವನ್ನು ಯಶಸ್ವಿಯಾಗಿ ಪ್ರದರ್ಶಿಸಿತು.
|
ರಥವೊಂದನ್ನು ಮುನ್ನಡೆಸಲು ಸಾರಥಿ ಇರುವಂತೆ ಕಲಾಕೇಂದ್ರವು ಎಂ. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿದೆ. ಕಲಾ ಕೇಂದ್ರವು ಯಕ್ಷಗಾನ ಕಲಾಸಕ್ತರಿಗೆ ವಯೋಮಾನದ ಮಿತಿಯಿಲ್ಲದೆ ಪ್ರತಿ ಭಾನುವಾರ ಉಚಿತ ಯಕ್ಷಗಾನ ತರಬೇತಿ ನೀಡುತ್ತಿದೆ. ಇಡೀ ಜಗತ್ತೇ ಕಂಪ್ಯೂಟರ್ಮಯವಾಗಿರುವ ಇಂದು ಯಕ್ಷಗಾನವನ್ನು ಸಂಪೂರ್ಣವಾಗಿ ವೀಕ್ಷಿಸುವ ತಾಳ್ಮೆಯಾಗಲೀ, ಸಮಯವಾಗಲೀ ಯಾರಿಗೂ ಇಲ್ಲವಾಗಿದೆ. ಹಾಗಾಗಿ ಈ ಯುಗಕ್ಕೂ ಅನುಗುಣವಾಗುವಂತೆ ಸಮಯ ಹೊಂದಿಸಿಕೊಂಡು ನಮ್ಮ ನಾಡಿನ ಕಲಾ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಎಳೆಯರಿಗೆ ತರಬೇತಿ ನೀಡಿ ಅವರನ್ನು ಯಕ್ಷ ಕಲಾವಿದರನ್ನಾಗಿ ರೂಪಿಸಲು ಕಲಾಕೇಂದ್ರ ವಹಿಸುತ್ತಿರುವ ಕಾಳಜಿ, ಶ್ರಮ ಶ್ಲಾಘ್ಯ.
ಒಂಬತ್ತನೇ ವರ್ಷಾಚರಣೆಯ ಸಂದರ್ಭ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕಿ ಹಾಗೂ ಯಕ್ಷಗಾನ ಕಲಾವಿದೆ ಸಾವಿತ್ರಿ ಎಸ್. ರಾವ್ ಅವರನ್ನು ಸಮ್ಮಾನಿಸಲಾಯಿತು. ಸಾವಿತ್ರಿಯವರು ಈ ಇಳಿವಯಸ್ಸಿನಲ್ಲೂ ಯಕ್ಷಗಾನ ವೇಷ ತೊಟ್ಟು ರಂಗ ಪ್ರವೇಶಿಸುತ್ತಿದ್ದು, ಅವರ ಯಕ್ಷಗಾನ ಆಸಕ್ತಿ ಯಕ್ಷಗಾನ ಕಲಾಸಕ್ತ ಮಹಿಳೆಯರಿಗೆ ಆದರ್ಶ ಹಾಗೂ ಮಾದರಿ ಯಾಗಿದೆ.
ಕೇಂದ್ರದ ಪುಟಾಣಿ ಕಲಾವಿದರನ್ನು ಕಲಾವಿದ ರನ್ನಾಗಿ ರೂಪಿಸುವಲ್ಲಿ ಹವ್ಯಾಸಿ ಕಲಾವಿದ ರಾಕೇಶ್ ರೈ ಅಡ್ಕ ಅವರ ಪ್ರಯತ್ನ ಅಪ್ರತಿಮ. ಅವರನ್ನೂ ಇದೇ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.
ಶ್ರೀ ಶಾರದಾ ಯಕ್ಷಕಲಾ ಕೇಂದ್ರದಂತಹ ಯಕ್ಷಗಾನ ತರಬೇತಿ ಕೇಂದ್ರಗಳು ಎಳೆಯರಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸಿ, ಕಲಿಸಿ ಕಲೆಯ ಉಳಿವಿಗಾಗಿ ನಡೆಸುತ್ತಿರುವ ಪರಿಶ್ರಮ ಶ್ಲಾಘನೀಯ. ಯಕ್ಷಗಾನ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಬೆಳೆಯುವ ಸಿರಿಯ ಮೊಳಕೆಯಲ್ಲೇ ಕಲಾರಾಧನೆಯ ಭಾವನೆ ಬೆಳೆಸಬೇಕಾಗಿರುವುದು ಅತ್ಯಗತ್ಯ ಮಾತ್ರವಲ್ಲ ಅತ್ಯಾವಶ್ಯಕ.
ಕೃಪೆ :
http://www.kannada.yahoo.com
|
|
|